ಫ್ಲೈಓವರ್ಗಳು ಮತ್ತು ಬ್ರಿಡ್ಜ್ಗಳ ಕೆಳಗೆ ಮಲಗುವ ಜನರು; ಫುಟ್ಪಾತ್ಗಳ ಮೇಲೆ ಗುಂಪುಗೂಡಿ ಕೂತಿರುವ ಕುಟುಂಬಗಳು; ಟ್ರಾಫಿಕ್ ಸಿಗ್ನಲ್ಗಳು, ರೈಲ್ವೆ ಸ್ಟೇಷನ್ಗಳು ಮತ್ತು ಬಸ್ ಡಿಪೋಗಳಲ್ಲಿ ಹಣಕ್ಕಾಗಿ ಬೇಡುತ್ತಿರುವ ವಯಸ್ಸಾದವರು ಹಾಗೂ ರೋಗಿಗಳು — ಇವೆಲ್ಲ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿ ದಿನ ಕಾಣುವ ಸಾಮಾನ್ಯ ದೃಶ್ಯಗಳು. ನಗರದ ಇಂತಹ ನಿರಾಶ್ರಿತರು ನಮ್ಮ ಕಣ್ಣ ಮುಂದೆಯೇ ಇರುತ್ತಾರೆ. ಆದರೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಮ್ಮ ನಗರಗಳಲ್ಲಿ ನಾವು ಅವರ ಇರುವಿಕೆಯನ್ನು ಗಮನಿಸುವುದೇ ಇಲ್ಲ. ಅವರ ಜೀವನಗಳು ಅಸಮಾನತೆ, ಅಸಹಾಯಕತೆ ಮತ್ತು ಸಮಾಜದಿಂದ ಅವರು ದೂರ ಉಳಿದಿರುವ ಕಥೆಗಳನ್ನು ಹೇಳುತ್ತವೆ.

ಬೆಂಗಳೂರಿನ ಬಸ್ ನಿಲ್ದಾಣವೊಂದರಲ್ಲಿ ವಿಶ್ರಮಿಸುತ್ತಿರುವ ನಿರಾಶ್ರಿತ ಮಹಿಳೆ
ಬೆಂಗಳೂರು ನಗರಕ್ಕೂ ಈ ನಿರಾಶ್ರಿತರ ಸಮಸ್ಯೆ ಹೊಸದೇನಲ್ಲ. ಈ ಸಮಸ್ಯೆ ಇಲ್ಲಿ ದಶಕಗಳಿಂದಲೂ ಇದೆ. ಬೀದಿಯಲ್ಲಿ ವಾಸಿಸುವ ಸಾವಿರಾರು ಜನರಿಗೆ ಆಶ್ರಯ ಮತ್ತು ಆರೈಕೆ ನೀಡಲು ಮುನ್ಸಿಪಲ್ ಸಂಸ್ಥೆಗಳು (ಮಹಾನಗರ ಪಾಲಿಕೆ) ಮತ್ತು ಲಾಭೋದ್ದೇಶ ರಹಿತ ಸಂಸ್ಥೆಗಳು ಕೆಲಸ ಮಾಡುತ್ತಲೇ ಇವೆ. ಉಳಿದ ನಗರಗಳಲ್ಲಿರುವಂತೆಯೇ, ಬೆಂಗಳೂರಿನ ನಿರಾಶ್ರಿತರಿಗೂ ಕೂಡ ವಸತಿ, ಊಟ ಮತ್ತು ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸವಾಲಿನ ಕೆಲಸವೇ.
2024ರ ಅಧ್ಯಯನವೊಂದರ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 10,000 ಜನರು ತಲೆಯ ಮೇಲೆ ಸೂರಿಲ್ಲದೆ ಬದುಕುತ್ತಿದ್ದಾರೆ. ಇವರಲ್ಲಿ ಸುಮಾರು ಶೇಕಡಾ 80 ರಷ್ಟು ಪುರುಷರಾಗಿದ್ದು, ಶೇಕಡಾ 85 ರಷ್ಟು ನಿರಾಶ್ರಿತರು ನಗರದ ಮಧ್ಯಭಾಗದಲ್ಲಿರುವ 50 ಪ್ರಮುಖ ಸ್ಥಳಗಳಲ್ಲೇ ಹೆಚ್ಚಾಗಿ ಕಂಡುಬರುತ್ತಾರೆ. ಇವರಲ್ಲಿ ಹೆಚ್ಚಿನವರು ಕಸ ಆರಿಸುವುದು, ತಲೆ ಮೇಲೆ ಸಾಮಾನು ಹೊರುವುದು, ಕ್ಯಾಟರಿಂಗ್ ಮತ್ತು ಭಿಕ್ಷಾಟನೆಯಂತಹ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಾರೆ. ಇವು ಯಾವುದೇ ಭದ್ರತೆ ಅಥವಾ ಸ್ಥಿರತೆ ಇಲ್ಲದ ಉದ್ಯೋಗಗಳಾಗಿವೆ.
ವ್ಯಸನ ಮತ್ತು ನಿರಾಶ್ರಿತ ಬದುಕು: ಮುಗಿಯದ ಒಂದು ದುಷ್ಟಚಕ್ರ
ಅದು ಮುಂಜಾನೆ 6:30 ರ ಸಮಯ. ಬೆಂಗಳೂರಿನ ಕೇಂದ್ರಭಾಗದ ಚೌಕದಲ್ಲಿರುವ, ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಪೊಲೀಸ್ ಸ್ಟೇಷನ್ ಈಗ ಆಶ್ಚರ್ಯವೆನ್ನುವಂತೆ ಶಾಂತವಾಗಿದೆ. ಅಲ್ಲಿಂದ ಕೂಗಳತೆಯ ದೂರದಲ್ಲಿರುವ ಒಂದು ಪಾರ್ಕಿನ ಬೆಂಚುಗಳ ಮೇಲೆ ಕೆಲವು ಜನರು ಕುಳಿತಿದ್ದಾರೆ. ಇನ್ನೂ ಕೆಲವು ಜನರು ಫುಟ್ಪಾತ್ಗಳ ಮೇಲೆ ಮತ್ತು ಅಂಗಡಿಗಳ ಮುಂಭಾಗದಲ್ಲಿ ಮಲಗಿದ್ದಾರೆ. ಹೇಳಿಕೊಳ್ಳಲು ಮನೆ ಇಲ್ಲದ ಬೆಂಗಳೂರಿನ ನಾಗರಿಕರನ್ನು ನಾವು ಭೇಟಿಯಾಗುವುದು ಇಲ್ಲೇ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಕೊಲಗಾಂವ್ನ 56 ವರ್ಷದ ನಾನಾ ಭಾಯ್, ಕೆಲವು ವರ್ಷಗಳ ಹಿಂದೆ ಹೆಂಡತಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಬಂದವರು. “ನನ್ನ ಕುಡಿತದ ವ್ಯಸನದಿಂದಾಗಿ ಅವಳು ನನ್ನ ಜೊತೆ ದಿನಾ ಜಗಳ ಆಡುತ್ತಿದ್ದಳು” ಎನ್ನುತ್ತಾರೆ ಅವರು. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕೆಲಸ ಹುಡುಕುವುದಕ್ಕಿಂತ ಮನೆ ಹುಡುಕುವುದು ತುಂಬಾ ಕಷ್ಟ. ನಾನಾ ಭಾಯ್ ದಿನಗೂಲಿ ಕೆಲಸ ಮಾಡಿ ದಿನಕ್ಕೆ 600 ರೂಪಾಯಿ ಸಂಪಾದಿಸುತ್ತಾರೆ, ಆದರೆ ಆ ಹಣದ ಬಹುಭಾಗವನ್ನು ಹೆಂಡದ ಮೇಲೆಯೇ ಖರ್ಚು ಮಾಡುತ್ತಾರೆ.

ನಾನಾ ಭಾಯ್ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ
ನಾನಾ ಭಾಯ್ ಅವರಿಗೆ ಈಗ ತಮ್ಮ ಕುಟುಂಬದವರ ಜೊತೆ ಯಾವುದೇ ಸಂಪರ್ಕವಿಲ್ಲ. ಇವರ ಬಳಿ ಇರೋ ಏಕೈಕ ಆಸ್ತಿ ಅಂದರೆ ಒಂದು ಬೆನ್ನುಚೀಲ – ಈ ಮಾತು ಇತರ ನಿರಾಶ್ರಿತರಿಗೂ ಅನ್ವಯಿಸುತ್ತದೆ. ಅವರ ದಿನನಿತ್ಯದ ಅತ್ಯಂತ ಮುಖ್ಯವಾದ ವಸ್ತುಗಳಿಗೆ ಆ ಚೀಲವೇ ಆಸರೆ.
ಅಕ್ಬರ್ ಅವರು ತಮ್ಮ ಬದುಕಿನ ಉದ್ದೇಶ ಮತ್ತು ತಮ್ಮನ್ನು ತಾವು ಕಂಡುಕೊಂಡ ಪರಿ
ಸತತ ಕಾಳಜಿ ಮತ್ತು ಆರೈಕೆಯಿಂದ ಒಬ್ಬ ಮನುಷ್ಯನ ಜೀವನದಲ್ಲಿ ಸಂಪೂರ್ಣ ಬದಲಾವಣೆ ತರಬಹುದು ಎಂಬುದಕ್ಕೆ ಅಕ್ಬರ್ ಅಲಿ ಖಾನ್ (47) ಅವರ ಕಥೆಗಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ವರ್ಷಗಟ್ಟಲೆ ಅಕ್ಬರ್ ಫುಟ್ಪಾತ್ಗಳ ಮೇಲೆಯೇ ಮಲಗುತ್ತಿದ್ದರು. ಓದಿದ್ದು ಕೇವಲ ಮೂರನೇ ತರಗತಿಯವರೆಗೆ ಮಾತ್ರ. ಸರಿಯಾದ ಕೆಲಸದ ಅವಕಾಶಗಳು ಇಲ್ಲದಿದ್ದರಿಂದ, ಅವರು ಸಣ್ಣಪುಟ್ಟ ಕಳ್ಳತನಗಳನ್ನು ಮಾಡುತ್ತಿದ್ದರು. “ಆ ಆಯ್ಕೆಗಳನ್ನು ನಾನು ಇವತ್ತಿಗೂ ದುಃಖದಿಂದ ನೆನಪಿಸಿಕೊಳ್ಳುತ್ತೇನೆ, ಆದರೆ ಅದಕ್ಕೆ ನಾಚಿಕೆಪಡುವುದಿಲ್ಲ. ನಾನು ಬದುಕಿನ ಎಷ್ಟೋ ವರ್ಷಗಳನ್ನು ಕಳೆದುಕೊಂಡೆ, ಆದರೆ ಅಷ್ಟಕ್ಕೇ ನನ್ನ ಕಥೆ ಮುಗಿಯುವುದಿಲ್ಲ” ಎನ್ನುತ್ತಾರೆ ಅಕ್ಬರ್.
ಅವರ ಅತ್ತೆಯ ಪ್ರೀತಿ ಮತ್ತು ಆದರದಿಂದಾಗಿ ಅಕ್ಬರ್ ಬದುಕಿನಲ್ಲಿ ಸ್ವಲ್ಪ ಕಾಲ ಸ್ಥಿರತೆ ಇತ್ತು. ಅವರು ಅಕ್ಬರ್ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದ್ದರು; ಇಂತಹ ಗೌರವ ಅವರಿಗೆ ಜೀವನದಲ್ಲಿ ಆಗೊಮ್ಮ ಈಗೊಮ್ಮೆ ಮಾತ್ರ ಸಿಕ್ಕಿತ್ತು. ಅಕ್ಬರ್ ಮದುವೆಯಾಗಿ, ಜಯನಗರದಲ್ಲಿ ಒಂದು ಸಣ್ಣ ಮನೆ ಕಟ್ಟಿ, ಹೊಸ ಜೀವನ ಆರಂಭಿಸಿದರು. ಆದರೆ ಬದುಕು ಅಂದುಕೊಂಡಂತೆ ಸಾಗಲಿಲ್ಲ; ಅಕ್ಬರ್ ಮತ್ತೊಮ್ಮೆ ಬೀದಿಗೆ ಬರಬೇಕಾಯಿತು.
ಆದರೆ, ಅವರ ಬದುಕಿನಲ್ಲಿ ನಿಜವಾದ ಬದಲಾವಣೆ ಪ್ರಾರಂಭವಾದದ್ದು ಅವರು ‘ಮೆಡಿಕಲ್ ಕೇರ್ ಅಂಡ್ ರಿಕವರಿ ಸೆಂಟರ್’ಗೆ (MCRC) ಬಂದಾಗ. ಅಲ್ಲಿ ಅವರಿಗೆ ಸಿಕ್ಕ ಆರೈಕೆ, ಅವರಲ್ಲಿ ವರ್ಷಗಳಿಂದ ನಿದ್ರಿಸುತ್ತಿದ್ದ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿತು. ಅವರು ಅಲ್ಲಿ — ಬೆಡ್ ಶೀಟ್ಗಳನ್ನು ಮಡಚುವುದು, ನೀರು ಹೊರುವುದು ಮತ್ತು ಸಂಕಟದಲ್ಲಿದ್ದ ರೋಗಿಗಳ ಪಕ್ಕ ಕುಳಿತು ಧೈರ್ಯ ತುಂಬುವುದು ಮುಂತಾದ — ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ನೋಡುವವರಿಗೆ ಇವು ಸಾಮಾನ್ಯ ಕೆಲಸಗಳಂತೆ ಕಂಡರೂ, ಅಕ್ಬರ್ ಪಾಲಿಗೆ ಇವು ತಮ್ಮ ಕಳೆದುಹೋದ ಸ್ವಾಭಿಮಾನ ಮತ್ತು ಸ್ವಯಂ-ಗೌರವವನ್ನು ಮರಳಿ ಪಡೆಯುವ ಪ್ರಮುಖ ಹೆಜ್ಜೆಗಳಾಗಿದ್ದವು.
ಇವತ್ತು ಅಕ್ಬರ್ ಅದೇ MCRC ಕೇಂದ್ರದಲ್ಲಿ ರಾತ್ರಿ ವೇಳೆಯ ಉಸ್ತುವಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 16,000 ರೂಪಾಯಿ ಸಂಬಳ ಪಡೆಯುವ ಅವರು, ಅದರಲ್ಲಿ 11,000 ರೂಪಾಯಿಗಳನ್ನು ತಪ್ಪದೇ ಉಳಿಸುತ್ತಿದ್ದಾರೆ! ಅವರಿಗೆ ಮತ್ತೆ ಸ್ವಂತ ಮನೆ ಮಾಡಬೇಕು ಅನ್ನೋ ಕನಸಿದೆ. ಆದರೆ ಅದಕ್ಕಿಂತ ಹೆಚ್ಚಾಗಿ, ಕಷ್ಟದಲ್ಲಿರುವ ಇತರ ಜನರನ್ನು ಯಾರೂ ನಿರ್ಲಕ್ಷಿಸಬಾರದು, ಅವರನ್ನೂ ಎಲ್ಲರಂತೆ ನಡೆಸಿಕೊಳ್ಳಬೇಕು ಎಂಬುದು ಅವರ ಆಸೆ. ಪ್ರತಿ ರಾತ್ರಿ ಅವರು ಮಾಡುವ ಕೆಲಸ, ಅವರು ತಮ್ಮ ಬದುಕಿನಲ್ಲಿ ಕಳೆದುಕೊಂಡ ವರ್ಷಗಳಿಗೆ ತಾವೇ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತದಂತಿದೆ.

ರಸ್ತೆ ಬದಿಯ ಆರೋಗ್ಯ ಶಿಬಿರದಲ್ಲಿ ವಲಸೆ ಕಾರ್ಮಿಕರಿಗೆ ರಕ್ತದೊತ್ತಡ ತಪಾಸಣೆ ಮಾಡುತ್ತಿರುವುದು
ಜೂಲನ್ ತನ್ನ ಕುಟುಂಬವನ್ನು ಮರಳಿ ಸೇರಿದ ಕಥೆ
2025ರ ಮೇ 21 ರಂದು, ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಮೇಲೆ ಒಬ್ಬಂಟಿಯಾಗಿ ಕುಳಿತು, ಹಾಡು ಹೇಳುತ್ತಾ ತನಗೆ ತಾನೇ ಏನೇನೋ ಗೊಣಗಿಕೊಳ್ಳುತ್ತಿದ್ದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸರು ಗಮನಿಸಿದರು. ಯಾರಾದರೂ ಹತ್ತಿರ ಹೋದರೆ ಸಾಕು ಅವರು ತುಂಬಾ ಹೆದರುತ್ತಿದ್ದರು ಮತ್ತು ಯಾವುದೇ ಸಹಾಯವನ್ನು ಬೇಡ ಎನ್ನುತ್ತಿದ್ದರು. ಆದರೆ ಒಬ್ಬ ಸಾಮಾಜಿಕ ಕಾರ್ಯಕರ್ತರು ತಾಳ್ಮೆಯಿಂದ ಮತ್ತು ಮೃದುವಾಗಿ ಮಾತನಾಡಿಸಿ, ಕೊನೆಗೂ ಅವರ ನಂಬಿಕೆಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಆ ನಿರಾಶ್ರಿತ ಮಹಿಳೆ ಜೂಲನ್. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮೊದಲ ಗಂಡ ಅವರನ್ನು ಕೈಬಿಟ್ಟಿದ್ದ; ಆಮೇಲೆ ಪರಿಸ್ಥಿತಿ ಅವರನ್ನು ಮತ್ತೊಂದು ಮದುವೆಗೆ ದೂಡಿತ್ತು. ಇದರಿಂದ ಬೇಸತ್ತು, ಅಸಹಾಯಕತೆಯಿಂದ ಅವರು ಮನೆ ಬಿಟ್ಟು ಓಡಿ ಬಂದಿದ್ದರು. ತಿಂಗಳುಗಟ್ಟಲೆ ಎಲ್ಲೆಂದರಲ್ಲಿ ಅಲೆದಾಡಿ ಕೊನೆಗೆ ಬೆಂಗಳೂರು ಬಂದು ತಲುಪಿದ್ದರು.
ತುರ್ತು ಆರೈಕೆ ಮತ್ತು ಪುನಶ್ಚೇತನ ಕೇಂದ್ರದಲ್ಲಿ ಅವರಿಗೆ ತಕ್ಷಣ ಆರೈಕೆ ನೀಡಲಾಯಿತು. ಜೂಲನ್ ನಾಪತ್ತೆಯಾಗಿದ್ದಾಳೆ ಎಂದು ಅವಳ ಕುಟುಂಬದವರು ಕೆಲವು ತಿಂಗಳುಗಳ ಹಿಂದೆಯೇ ದೂರು ದಾಖಲಿಸಿದ್ದರು ಎಂದು ಕೋಲ್ಕತ್ತಾ ಪೊಲೀಸರು ಮರುದಿನವೇ ಮಾಹಿತಿ ನೀಡಿದರು. ತಕ್ಷಣವೇ ಒಂದು ವಿಡಿಯೋ ಕಾಲ್ ವ್ಯವಸ್ಥೆ ಮಾಡಿ, ಸಂಕಟದಲ್ಲಿದ್ದ ಆ ಮಹಿಳೆಯನ್ನು ಅವಳ ಹೆತ್ತವರು ಮತ್ತು ತಂಗಿಯೊಂದಿಗೆ ಮುಖಾಮುಖಿ ಮಾಡಿಸಲಾಯಿತು. ಪುನಶ್ಚೇತನ ಕೇಂದ್ರದಲ್ಲಿ ಒಂದು ವಾರವಿದ್ದು ಜೂಲನ್ ಮಾನಸಿಕವಾಗಿ ಸ್ವಲ್ಪ ಚೇತರಿಸಿಕೊಂಡ ನಂತರ, ಜೂನ್ 9 ರಂದು ಅವರನ್ನು ಪಶ್ಚಿಮ ಬಂಗಾಳದ ಬ್ಯಾಂಕುರಾದಲ್ಲಿದ್ದ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಲಾಯಿತು. ಹಲವು ತಿಂಗಳುಗಳ ಭಯ ಮತ್ತು ಆತಂಕದ ನಂತರ, ಜೂಲನ್ ಕುಟುಂಬದವರು ಅವರನ್ನು ಅಪ್ಪಿಕೊಂಡ ಆ ಕ್ಷಣ ಅಲ್ಲಿದ್ದ ಎಲ್ಲರ ಕಣ್ಣಾಲಿಗಳನ್ನೂ ತುಂಬಿ ಬರುವಂತೆ ಮಾಡಿತು.
ನಮ್ಮ ಕುಟುಂಬ – ಕಾಳಜಿ ತೋರುವ ಒಂದು ವ್ಯವಸ್ಥೆ
ಸಾಮಾನ್ಯವಾಗಿ, ನಾನಾ ಭಾಯ್, ಅಕ್ಬರ್ ಮತ್ತು ಜೂಲನ್ ಅವರಂತಹ ಜನರಿಗೆ ನಿಜವಾದ ನೆಮ್ಮದಿ ಮತ್ತು ಸಹಾಯ ಬರುವುದು ‘ನಮ್ಮ ಕುಟುಂಬ’ದಿಂದ. ನಗರದ ನಿರಾಶ್ರಿತರಿಗೆ ಘನತೆ, ಸುರಕ್ಷತೆ ಮತ್ತು ಸಂಪೂರ್ಣ ಆರೈಕೆಯನ್ನು ನೀಡುವ ಉದ್ದೇಶದಿಂದ 2022ರಲ್ಲಿ ʼನಮ್ಮ ಕುಟುಂಬʼ ಯೋಜನೆಯನ್ನು ಪ್ರಾರಂಭಿಸಲಾಯಿತು. ಇಂದು ಈ ಯೋಜನೆಯು ನಿರಾಶ್ರಿತರ ಬದುಕಿನಲ್ಲಿ ಒಂದು ಭರವಸೆಯ ಬೆಳಕಾಗಿದೆ.
ಈ ಯೋಜನೆಯು ಮೂರು ಸರ್ಕಾರೇತರ ಸಂಸ್ಥೆಗಳ ಜಂಟಿ ಪ್ರಯತ್ನವಾಗಿದೆ —ದಿ ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್, ಆಲದಮರ ಫೌಂಡೇಷನ್ ಮತ್ತು ದಯಾ ರಿಹ್ಯಾಬಿಲಿಟೇಶನ್ ಟ್ರಸ್ಟ್ (ಥನಾಲ್). ರಸ್ತೆ ಸಮೀಕ್ಷೆಗಳು, ಆರೋಗ್ಯ ಶಿಬಿರಗಳು, ಹಗಲು ಮತ್ತು ರಾತ್ರಿ ಆಶ್ರಯ ತಾಣಗಳು ಹಾಗೂ ಪ್ರತ್ಯೇಕ ಹೆಲ್ಪ್ಲೈನ್ ಮೂಲಕ ಕಷ್ಟದಲ್ಲಿರುವ ಜನರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
‘ನಮ್ಮ ಕುಟುಂಬ’ ನಿರಾಶ್ರಿತರ — ರಕ್ಷಣೆ, ಅವರಿಗೆ ಆರೋಗ್ಯ ಸೇವೆ ಒದಗಿಸುವುದು, ಅಗತ್ಯ ದಾಖಲೆಗಳನ್ನು ಮಾಡಿಸಿಕೊಡುವುದು, ಕೌನ್ಸಿಲಿಂಗ್ ಮಾಡುವುದು, ಪುನರ್ವಸತಿ ಕಲ್ಪಿಸುವುದು ಮತ್ತು ಅವರ ಕುಟುಂಬದವರ ಜೊತೆ ಮತ್ತೆ ಸೇರಿಸುವವರೆಗೆ — ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತು ಅವರು ಹೊಸ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ.

ರಸ್ತೆ ಬದಿಯ ಆರೋಗ್ಯ ಶಿಬಿರದಲ್ಲಿ ವಲಸೆ ಕಾರ್ಮಿಕರಿಗೆ ರಕ್ತದೊತ್ತಡ ತಪಾಸಣೆ ಮಾಡುತ್ತಿರುವುದು
ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸವಿತಾ ಅವರು ಹೀಗೆ ಹೇಳುತ್ತಾರೆ: “ಜನರನ್ನು ರಸ್ತೆಯಲ್ಲೇ ಬಿಟ್ಟುಬಿಡುವುದು ನನಗಿಷ್ಟವಿಲ್ಲ. ನನ್ನ ಪೊಲೀಸ್ ಠಾಣೆ ಕಡೆಯಿಂದ ನಿರಾಶ್ರಿತರಿಗೆ ಅಗತ್ಯ ನೆರವು ಮತ್ತು ಘನತೆ ಸಿಗುವಂತೆ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಈ ನಿಟ್ಟಿನಲ್ಲಿ ‘ನಮ್ಮ ಕುಟುಂಬ’ ತಂಡದವರು ಬಹಳ ಸಹಾಯ ಮಾಡುತ್ತಿದ್ದಾರೆ. ನಾನು ರಾತ್ರಿ 11 ಗಂಟೆಗೆ ಫೋನ್ ಮಾಡಿದರೂ ಅವರು ತಕ್ಷಣ ಬಂದು ಸ್ಪಂದಿಸುತ್ತಾರೆ. ಜನರನ್ನು ರಕ್ಷಿಸುವುದರಿಂದ ಹಿಡಿದು ಅವರನ್ನು ಮರಳಿ ಕುಟುಂಬದವರ ಜೊತೆ ಸೇರಿಸುವವರೆಗೂ ಎಲ್ಲಾ ಜವಾಬ್ದಾರಿಗಳನ್ನೂ ಅವರೇ ನಿಭಾಯಿಸುತ್ತಾರೆ.”
ನಿರಾಶ್ರಿತರ ಬದುಕು ಒಂದೆಡೆ ನಿಲ್ಲದ, ಅಲೆಮಾರಿತನದಿಂದ ಕೂಡಿದ್ದರೂ ಸಹ, ‘ನಮ್ಮ ಕುಟುಂಬ’ ಸಂಸ್ಥೆಯು ಅವರೊಂದಿಗೆ ನಿರಂತರವಾದ ಸಂಪರ್ಕವನ್ನು ಸಾಧಿಸಿದೆ. ಕೇವಲ ಬೀದಿಬದಿಯ ಸಂಪರ್ಕ ಕಾರ್ಯಕ್ರಮಗಳ ಮೂಲಕವೇ ಈ ತಂಡವು 450ಕ್ಕೂ ಹೆಚ್ಚು ಜನರನ್ನು ತಲುಪಿದೆ. ಪ್ರತಿಯೊಬ್ಬರ ಕಥೆಯನ್ನೂ ಅತ್ಯಂತ ಸೂಕ್ಷ್ಮತೆ, ತಾಳ್ಮೆ ಮತ್ತು ಗೌರವದಿಂದ ನಿಭಾಯಿಸಿದೆ. ಪ್ರತಿ ಬಾರಿ ಒಬ್ಬ ನಿರಾಶ್ರಿತನನ್ನು ರಕ್ಷಿಸಿದಾಗಲೂ, ಈ ಯೋಜನೆಯು ಒಂದು ನಗರವು ತನ್ನ ನಿರಾಶ್ರಿತರನ್ನು ಎಷ್ಟು ಕರುಣೆ ಮತ್ತು ಕಾಳಜಿಯಿಂದ ನಡೆಸಿಕೊಳ್ಳಬೇಕು ಎಂಬುದನ್ನು ಇಡೀ ಸಮಾಜಕ್ಕೆ ತೋರಿಸಿಕೊಡುತ್ತದೆ.
